Tuesday, September 7, 2010

ರಾಮನಿಂದ ರಾಜ್ಯದವರೆಗೆ…

ಹರೇರಾಮ





ಪ್ರಯಾಗದಲ್ಲಿ ಶುಭ್ರಗಂಗೆಯೊಡನೆ ಸೇರುವ ಶ್ಯಾಮಯಮುನೆಯಂತೆ…



ಸಂಧ್ಯಾಸಮಯದಲ್ಲಿ, ಬೆಳಗುವ ಬೆಳಕಿನೊಡನೆ ಬೆರೆಯುವ ಕಡುಗತ್ತಲೆಯಂತೆ…



ಕನ್ಯಾಕುಮಾರಿಯಲ್ಲಿ ಪೂರ್ವಸಾಗರದೊಡನೆ ಸಂಗಮಿಸುವ ಪಶ್ಚಿಮಸಾಗರದಂತೆ…



ಮಾಸಸಂಧಿಯಲ್ಲಿ ದಿವಾಕರನೊಡನೆ ಸಂಧಿಸುವ ನಿಶಾಕರನಂತೆ…









ಅನಂತಶಾಂತಿಯ ಆಶ್ರಮದ ಅಮೃತಪರಿಸರದಲ್ಲಿ ಬ್ರಹ್ಮತೇಜೋನಿಧಿಗಳಾದ ವಸಿಷ್ಠರೊಂದಿಗೆ ಸಂಗಮಿಸಿದನು ಶೌರ್ಯನಿಧಿಯಾದ ಕೌಶಿಕ…



ಉತ್ತರ ದಕ್ಷಿಣ ಧ್ರುವಗಳನ್ನು ನರರು ಸೇರಿಸಲುಂಟೇ…?



ಸಾಕ್ಷಾತ್ ವಿಧಿಯೇ ಏರ್ಪಡಿಸಿರಬೇಕು ಈ ಅಪೂರ್ವ ಸಂಯೋಗವನ್ನು…!



ಅದೆಷ್ಟು ವಿಭಿನ್ನತೆ ಇವರೀರ್ವರ ವ್ಯಕ್ತಿತ್ವಗಳಲ್ಲಿ…!?



ಒಬ್ಬ ಜಯಿಸುವವರಲ್ಲಿ ಶ್ರೇಷ್ಠ…



ಇನ್ನೊಬ್ಬನೋ ಜಪಿಸುವವರಲ್ಲಿ ಶ್ರೇಷ್ಠ..!



ಶಸ್ತ್ರಗಳಿಂದ ಶತ್ರುಗಳನ್ನು ಮೆಟ್ಟಿ ನಿಂತವನೊಬ್ಬ,..



ಶಾಸ್ತ್ರಗಳಿಂದ ಶತ್ರುತ್ವವನ್ನೇ ಮೀರಿ ನಿಂತವನಿನ್ನೊಬ್ಬ..!



ಬಾಹುಬಲದಿಂದ ಬಾಹ್ಯಪ್ರಪಂಚವನ್ನಾಳುವವನೊಬ್ಬ…



ಭಾವಬಲದಿಂದ ಅಂತ:ಪ್ರಪಂಚದಲ್ಲಿ ಬೆಳಗುವವನಿನ್ನೊಬ್ಬ..!



ಬಾಣಗಳಿಂದ ಲಕ್ಷ್ಯಗಳನ್ನು ಭೇದಿಸುವನೊಬ್ಬ…



ಧ್ಯಾನದಿಂದ ಪರಮಲಕ್ಷ್ಯವನ್ನೇ ತಲುಪಿಸುವನಿನ್ನೊಬ್ಬ…!



ರಾಜದಂಡದಿಂದ ಪಾತಕಿಗಳನ್ನು ದಂಡಿಸುವವನೊಬ್ಬ…



ಬ್ರಹ್ಮದಂಡದಿಂದ ಪತಿತರನ್ನುದ್ಧರಿಸುವವನಿನ್ನೊಬ್ಬ…!



ಒಬ್ಬನದು ಅರಮನೆ…



ಇನ್ನೊಬ್ಬನಿಗೆ ಅರಣ್ಯವೇ ಮನೆ!



ಒಬ್ಬನದು ಜೈತಯಾತ್ರೆಯಾದರೆ ಮೈತ್ರಯಾತ್ರೆ ಇನ್ನೊಬ್ಬನದು..!



ಒಬ್ಬನ ಶೋಭೆಗೆ ಕಾರಣ ಆಭೂಷಣವಾದರೆ ಇನ್ನೊಬ್ಬನಿಗೆ ಆತ್ಮವೇ ಆಭರಣ..!



ವಿಶ್ವದ ಯಾವುದೇ ಎರಡು ಮಹಾಶಕ್ತಿಗಳ ನಡುವೆ ಸಂಗಮವಾಗಲೀ, ಸಂಘರ್ಷವಾಗಲೀ ಏರ್ಪಟ್ಟಾಗ ಅದಕ್ಕೊಂದು ಮಹಾಫಲವೇ ಇರಬೇಕಲ್ಲವೇ?



ವಿಧಿಚಿತ್ತವೇನಿತ್ತೋ?



ಬ್ರ್ರಹ್ಮ-ಕ್ಷತ್ರಗಳ ಮಹಾಮೇರುಗಳೆರಡು ವಸಿಷ್ಠ-ಕೌಶಿಕರ ರೂಪದಲ್ಲಿ ಸಂಧಿಸಿದವು ಅಲ್ಲಿ…



ಎತ್ತರದವರೆಲ್ಲ ಹತ್ತಿರದವರಲ್ಲ…



ಹತ್ತಿರದವರೆಲ್ಲ ಎತ್ತರದವರಾಗಿರಬೇಕಿಲ್ಲ…



ಎತ್ತರವಾಗಿದ್ದೂ ಹತ್ತಿರವಾಗುವವರು ಎಲ್ಲೋ ಭುವಿಗೊಬ್ಬರು…ಯುಗಕ್ಕೊಬ್ಬರು..!



ಎತ್ತರವನ್ನು ಕಂಡಾಗ ಕೌಶಿಕನಿಗೆ ವಸಿಷ್ಠರು ಸಾಕ್ಷಾತ್ ಪರಮಾತ್ಮನೇ ಎಂಬಂತೆ ತೋರಿಬಂದರು..



ಆದರೆ ಹತ್ತಿರವಾದಾಗ ಅವರು ತನ್ನಾತ್ಮವೇ ಎನ್ನಿಸುವಷ್ಟು ಆಪ್ತವಾದರು..!



ವಸಿಷ್ಠರ ಎತ್ತರ ಕೌಶಿಕನಲ್ಲಿ ವಿನಯವನ್ನು ಹುಟ್ಟುಹಾಕಿತು..



ಅವರ ಆಪ್ತತೆ ಕೌಶಿಕನಲ್ಲಿ ಪ್ರೀತಿಯನ್ನು ಮೂಡಿಸಿತು..



ಪ್ರೀತಿಯು ಆತನನ್ನು ಸಮೀಪಿಸುವಂತೆ ಮಾಡಿತು..



ವಿನಯವು ಆತನನ್ನು ಅವರ ಶ್ರೀಚರಣಗಳಲ್ಲಿ ಮಣಿಸಿತು..



ಆಚಾರ್ಯನೆಂದರೆ ಆತ್ಮಸಾಮ್ಯಾವಹನಲ್ಲವೇ?



ಬಳಿಸಾರುವ ಜೀವಗಳನ್ನು ಆತ ತನ್ನಂತೆಯೇ ಮಾಡುವುದು ನಿಶ್ಚಯವಲ್ಲವೇ?



ಪ್ರಣತಿಗೆ ಪ್ರತಿಕ್ರಿಯೆಯಾಗಿ ವಸಿಷ್ಠರಿತ್ತ ಆಶೀರ್ವಾದದ ಆಂತರ್ಯದಲ್ಲಿ ಸಮ್ರಾಟ್ ಕೌಶಿಕನು ತನ್ನಂತೆ ‘ಸ್ವರಾಟ್’ ಆಗಲೆಂಬ ಆಶಯವಿದ್ದಿತು..



ರತ್ನಸಿಂಹಾಸನ ವಿರಾಜಿತನಾದ, ಮೃಷ್ಟಾನ್ನಭೋಜಿಯಾದ ಕೌಶಿಕನಿಗೆ ವಸಿಷ್ಠರಿತ್ತ ದರ್ಭಾಸನ, ಕಂದ-ಮೂಲ-ಫಲಗಳು, ಬದಲಾಗುವ ಭವಿಷ್ಯತ್ತಿನ ಅವ್ಯಕ್ತ ಸಂದೇಶವನ್ನು ನೀಡುವಂತಿದ್ದಿತು..



ಮತ್ತೆ ನಡೆಯಿತು ಮಹಾಮುನಿ ಮತ್ತು ಮಹಾರಾಜರ ನಡುವೆ ಕುಶಲಪ್ರಶ್ನೆಗಳ ವಿನಿಮಯ..



ಮಹೋನ್ನತ ವ್ಯಕ್ತಿತ್ವಗಳ ನಡುವೆ ನಡೆಯುವ ಕುಶಲಪ್ರಶ್ನೆಗಳು ಲೋಕಸಾಮಾನ್ಯರ ಬದುಕಿಗೆ ಆತ್ಮವಿಸ್ತರಣೆಯ ಕೈದೀವಿಗೆಗಳು..!



ಕೌಶಿಕನು ಪ್ರಶ್ನಿಸಿದ್ದು ತಪಸ್ಸು-ಅಗ್ನಿಹೋತ್ರಗಳ, ಶಿಷ್ಯ-ಶ್ರದ್ಧಾಳುಗಳ, ಗಿಡಮರಗಳ, ಮೃಗಪಕ್ಷಿಗಳ ಯೋಗಕ್ಷೇಮವನ್ನು..



ಮಹರ್ಷಿಯೊಬ್ಬರ ಆತ್ಮ ಅವರ ಶರೀರಕ್ಕಷ್ಟೇ ಸೀಮಿತವಾಗಿರಬಾರದು…



ಅದು ಶಿಷ್ಯರಲ್ಲಿ, ಮೃಗಪಕ್ಷಿಗಳಲ್ಲಿ, ಹೆಚ್ಚೇಕೆ ಗಿಡಮರಗಳಲ್ಲಿಯೂ ವಿಸ್ತರಿಸಿ ವ್ಯಾಪಿಸಿರಬೇಕು…



ಇವುಗಳಲ್ಲಿ ಎಲ್ಲಿ ನೋವಾದರೂ ತಾನು ನೋಯುವ, ಎಲ್ಲಿ ನಗುವಿದ್ದರೂ ತಾನು ನಲಿಯುವ ತಾದಾತ್ಮ್ಯ ಆತನಿಗಿರಬೇಕು …



ತನ್ನೊಡನಾಡಿಗಳಲ್ಲೆಲ್ಲ ತನ್ನನ್ನೇ ಕಾಣುವ ವಿಸ್ತೃತಾತ್ಮನಾಗಿರಬೇಕು ಆತ…



ಸರ್ವತ್ರ ಕುಶಲವೆಂದ ವಸಿಷ್ಠರು ಅಂತೆಯೇ ಕೌಶಿಕನ, ರಾಜ್ಯ-ಕೋಶಗಳ, ಸೈನ್ಯ-ಸಾಮಂತರ, ಪುತ್ರ-ಪೌತ್ರರ, ಮಂತ್ರಿ-ಮಿತ್ರರ, ಪರಿಜನ-ಪುರಜನರ ಕುಶಲ ವಿಚಾರಿಸಿದರು…



‘ದೇಶವು ದೇಹವಾದರೆ, ರಾಜನೇ ಅದರ ಆತ್ಮ.. ಸೈನ್ಯ-ಕೋಶಗಳು, ಮಂತ್ರಿಗಳು, ಪ್ರಜೆಗಳೇ ಅದರ ಅಂಗಾಂಗಗಳು-ಇಂದ್ರಿಯಗಳು’ ಎಂಬ ತತ್ತ್ವದ ಅಭಿವ್ಯಕ್ತಿ ವಸಿಷ್ಠರ ಕುಶಲ ಪ್ರಶ್ನೆಯಲ್ಲಿತ್ತು…!



ಮಹಾಪುರುಷರು ಕುಶಲವನ್ನು ಪ್ರಶ್ನಿಸುವ ಪರಿಯೇ ಬದುಕಿಗೆ ಇಷ್ಟು ದೊಡ್ಡ ಸಂದೇಶವನ್ನು ನೀಡುವುದಾದರೆ, ಅವರ ಬದುಕು ಇನ್ನೆಷ್ಟು ದೊಡ್ಡ ಸಂದೇಶವನ್ನು ಜೀವಿಗಳ ಜೀವನಕ್ಕೆ ನೀಡೀತು?



ವಸಿಷ್ಠ-ಕೌಶಿಕರ ಕುಶಲಸಂಭಾಷಣೆಯು ಜೀವಲೋಕದ ಕುಶಲಕ್ಕೇ ಕಾರಣವಾಗಬಹುದಾದ ಮಹತ್ತರಘಟನಾವಳಿಗಳನ್ನು ಅನಾವರಣಗೊಳಿಸಬಹುದೆಂಬುದನ್ನು ಯಾರು ತಾನೇ ಊಹಿಸಿದ್ದರು…!?





ಹರೇರಾಮ

2 comments:

  1. moola....harerama.in (Shrimadjagadguru Shankaraachaarya Shri Shri Raghaveshwara bharathi swamiji)

    ReplyDelete

Note: Only a member of this blog may post a comment.